ಸನಾತನ-ಕಥೋಲಿಕ ಧರ್ಮಸಭೆಯಲ್ಲಿ ಸಂವಾದದ ಹಾದಿಯ ಹೆಜ್ಜೆಗಳು
ಡೆವಿನ್ ವ್ಯಾಟ್ಕಿನ್ಸ್
ಜೂನ್ 9, ಸೋಮವಾರ, ವಿಶ್ವಗುರು ಹದಿನಾಲ್ಕನೇ ಲಿಯೋರವರ ನೇತೃತ್ವದಲ್ಲಿ ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರದ ಮೂಲಕ ಪವಿತ್ರ ಸೇವಾ ಪೀಠಾಧಿಕಾರಿಗಳ ಮಹೋತ್ಸವದಲ್ಲಿ ಸುಮಾರು 5,000 ಜನರು ಭಾಗವಹಿಸಿದರು.
ಅವರು ಪ್ರವೇಶಿಸುತ್ತಿದ್ದಂತೆ, 1967ರಲ್ಲಿ ವಿಶ್ವಗುರು ಆರನೇಯ ಪೌಲರು ಮತ್ತು ಕಾನ್ಸ್ಟಾಂಟಿನೋಪಲ್ನ ಸಾರ್ವತ್ರಿಕ ಪರಿಷತ್ತಿನ ಪಿತೃಪ್ರಧಾನರಾದ ಅಥೇನಾಗೋರಸ್ ರವರ ನಡುವಿನ ಭೇಟಿಯ ಸ್ಮರಣಾರ್ಥ ಫಲಕವನ್ನು ದಾಟಿದರು. "ಕಥೋಲಿಕ ಮತ್ತು ಸನಾತನ ಧರ್ಮಸಭೆಗಳ ನಡುವಿನ ಪೂರ್ಣ ಸಹಭಾಗಿತ್ವದ ಪುನಃಸ್ಥಾಪನೆಗಾಗಿ" ಅವರು ಪ್ರಾರ್ಥಿಸಿದರೆಂದು ಕೆತ್ತನೆಯು ಹೇಳುತ್ತದೆ.
2025ರ ಜೂಬಿಲಿ ವರ್ಷವನ್ನು ಆಚರಿಸಲು ಅಂತರರಾಷ್ಟ್ರೀಯ ಸನಾತನ ಧರ್ಮಸಭೆಯ ದೈವಶಾಸ್ತ್ರ ಸಂಘದ ಅಧ್ಯಕ್ಷರಾದ ಡಾ. ಪೌಲ್ ಗವ್ರಿಲ್ಯುಕ್ ರವರು ವ್ಯಾಟಿಕನ್ ನೌಕರರೊಂದಿಗೆ ತೀರ್ಥಯಾತ್ರೆಗೆ ಸೇರಿಕೊಂಡರು.
ವ್ಯಾಟಿಕನ್ ಸುದ್ಧಿಯ ಜೊತೆಗೆ ಮಾತನಾಡಿದ ಡಾ. ಗವ್ರಿಲ್ಯುಕ್ ರವರು, ವಿಶ್ವಗುರು ಮತ್ತು ಪಿತೃಪ್ರಧಾನರ ನಡುವಿನ ಐತಿಹಾಸಿಕ ಸಭೆಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು "ಧರ್ಮಸಭೆಯ ಏಕತೆಯ ಕಡೆಗೆ ನಂಬಲಾಗದಷ್ಟು ಪ್ರಮುಖ ಹೆಜ್ಜೆಗಳನ್ನಿಡುತ್ತಿವೆ" ಎಂದು ಹೇಳಿದರು, ಇದನ್ನು ಅವರ ಸಂಸ್ಥೆ ಮುಂದುವರಿಸಲು ಆಶಿಸುತ್ತದೆ.
"ದೇವರಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸಲು ಮತ್ತು ಕ್ರೈಸ್ತರ ಐಕ್ಯತೆ ಹಾಗೂ ಸಮನ್ವಯದ ಬಗ್ಗೆ ವಿಶ್ವಗುರುಗಳ ಸುಜ್ಞಾನದ ಮಾತುಗಳನ್ನು ಆಲಿಸಲು" ಅವರು ಪವಿತ್ರ ಪೀಠಾಧಿಕಾರಿಯ ಜೂಬಿಲಿಯಲ್ಲಿ ಭಾಗವಹಿಸಿದ್ದರು. ಡಾ. ಗವ್ರಿಲ್ಯುಕ್ ರವರು ಅಮೇರಿಕದ ಮಿನ್ನೇಸೋಟದ ಸಂತ ಪೌಲ್ನಲ್ಲಿರುವ, ಸಂತ ಥೋಮಸ್ ರವರ ವಿಶ್ವವಿದ್ಯಾಲಯದಲ್ಲಿ ದೈವಶಾಸ್ತ್ರ ಮತ್ತು ತತ್ವಶಾಸ್ತ್ರದ ಅಕ್ವಿನಾಸ್ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಐಒಟಿಎ ಎಂದು ಕರೆಯಲ್ಪಡುವ ಅವರ ಸಂಘಟನೆಯು ಕಳೆದ ವಾರ ರೋಮ್ನ ಪಾಂಟಿಫಿಕಲ್ ಏಂಜೆಲಿಕಮ್ ವಿಶ್ವವಿದ್ಯಾಲಯದಲ್ಲಿ "ನೈಸಿಯಾ ಮತ್ತು ಮೂರನೇ ಸಹಸ್ರಮಾನದ ಧರ್ಮಸಭೆ: ಕಥೋಲಿಕ-ಸನಾತನ ಧರ್ಮಸಭೆಯ ಏಕತೆಯ ಕಡೆಗೆ" ಎಂಬ ಶೀರ್ಷಿಕೆಯ ಸಮ್ಮೇಳನವನ್ನು ಆಯೋಜಿಸಲು ಸಹಾಯ ಮಾಡಿತು.
325ರಲ್ಲಿ ನೈಸಿಯಾ ಪರಿಷತ್ತು "ಧರ್ಮಸಭೆಯಲ್ಲಿನ ವಿಭಜನೆಗಳನ್ನು ಸರಿಪಡಿಸಲು ಮತ್ತು ಐಕ್ಯತೆಯನ್ನು ಪುನಃಸ್ಥಾಪಿಸಲು" ಪ್ರಯತ್ನಿಸಿತು ಎಂದು ಡಾ. ಗವ್ರಿಲ್ಯುಕ್ ರವರು ಹೇಳಿದರು. ಅವರು ನೈಸಿಯಾ ಪರಿಷತ್ತಿನಲ್ಲಿ ಒಂದು ವಿಶ್ವಾಸ ಪ್ರಮಾಣವನ್ನು ಘೋಷಿಸುವಲ್ಲಿ ಯಶಸ್ವಿಯಾದರು ಮತ್ತು ಅದು ನೈಸೀನ್-ಕಾನ್ಸ್ಟಾಂಟಿನೋಪಲ್ ನ ವಿಶ್ವಾಸ ಪ್ರಮಾಣವಾಗಿದೆ, ಇದನ್ನು ನಾವು ಇಂದಿಗೂ ದಿನ್ಯ ಬಲಿಪೂಜೆಯಲ್ಲಿ ಮತ್ತು ಆರಾಧನೆಯಲ್ಲಿ [ಪ್ರಾರ್ಥನಾ ವಿಧಿಗಳಲ್ಲಿ] ಪಠಿಸುತ್ತೇವೆ.
ನೈಸಿಯಾದ 1,700ನೇ ವಾರ್ಷಿಕೋತ್ಸವದ ಸಮ್ಮೇಳನವು, ಪರಿಷತ್ತನ್ನು ಮೀರಿ ಒಂದು ಐತಿಹಾಸಿಕ ಘಟನೆಯಾಗಿ ನೋಡಿತು, ಧರ್ಮಸಭೆಯಲ್ಲಿನ ಐಕ್ಯತೆಯ ಭವಿಷ್ಯದ ಮೇಲೆ ಕೇಂದ್ರೀಕರಿಸಿತು. ಸನಾತನ ಧರ್ಮಸಭೆಯ ಸಂಪ್ರದಾಯದ ಬಗ್ಗೆ ಜ್ಞಾನ ಅಥವಾ ಅರಿವಿನ ವಿನಿಮಯವನ್ನು ಸುಗಮಗೊಳಿಸಲು ಅಂತರರಾಷ್ಟ್ರೀಯ ಸನಾತನ ಧರ್ಮಸಭೆಯ ದೈವಶಾಸ್ತ್ರದ ಸಂಘವು 44 ದೇಶಗಳ 1,700ಕ್ಕೂ ಹೆಚ್ಚು ಧರ್ಮಸಭೆಯ ನಾಯಕರು ಮತ್ತು ವಿದ್ವಾಂಸರನ್ನು ಒಂದುಗೂಡಿಸುತ್ತದೆ ಎಂದು ಡಾ. ಗವ್ರಿಲ್ಯುಕ್ ರವರು ಹೇಳಿದರು. ಜೂನ್ 4-7ರಂದು ನಡೆದ ಸಮ್ಮೇಳನವು ಲತೀನ್ ವಿಧಿಯ ಮತ್ತು ಪೂರ್ವ ವಿಧಿಗಳೆರಡರ ಕಥೋಲಿಕರನ್ನು ಹಾಗೂ ಕಾಪ್ಟಿಕ್, ಸಿರಿಯಾಕ್, ಚಾಲ್ಸೆಡೋನಿಯನ್ ಮತ್ತು ಅರ್ಮೇನಿಯನ್ ಸಂಪ್ರದಾಯಗಳ ಧರ್ಮಾಧ್ಯಕ್ಷರುಗಳು ಮತ್ತು ವಿದ್ವಾಂಸರನ್ನು ಒಟ್ಟುಗೂಡಿಸಿತು.
"ಹಿಂದಿನ ಕಾಲದ ದೈವಶಾಸ್ತ್ರದ ಸಂವಾದಗಳಲ್ಲಿ, ನಾವು ನಮ್ಮ ವಿಭಜನೆಗಳು ಮತ್ತು ವ್ಯತ್ಯಾಸಗಳನ್ನು ಮರಗಳಿಗೆ ಹೋಲಿಸಿ ಹೆಚ್ಚು ಒತ್ತು ನೀಡುತ್ತಿದ್ದೆವು, ಆದರೆ ತಂದೆ, ಮಗ ಮತ್ತು ಪವಿತ್ರಾತ್ಮರಾಗಿರುವ ದೇವರಲ್ಲಿ ನಾವು ವಿಶ್ವಾಸವಿಡುತ್ತೇವೆ ಎಂಬ ನಮ್ಮ ಮೂಲಭೂತ ಒಪ್ಪಂದದ ಅರಣ್ಯಕ್ಕಲ್ಲ. ಸಂಪೂರ್ಣವಾಗಿ ದೇವರಾಗಿರುವ ದೇವರ ಪುತ್ರ ನಮಗಾಗಿ ಮತ್ತು ಮನುಕುಲದ ರಕ್ಷಣಾ ಯೋಜನೆಗಾಗಿ ಮಾನವರಾದರೆಂದು ನಾವು ಮೂಲಭೂತವಾಗಿ ನಂಬುತ್ತೇವೆ" ಎಂದು ಡಾ. ಗವ್ರಿಲ್ಯುಕ್ ರವರು ಹೇಳಿದರು.
ಕಥೋಲಿಕ-ಸನಾತನ ಧರ್ಮದ ಸಂವಾದವು ನಮ್ಮನ್ನು ಕ್ರೈಸ್ತರಾಗಿ ಒಂದುಗೂಡಿಸುವ ದೈವಶಾಸ್ತ್ರದ ವಿಷಯಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಡಾ. ಗವ್ರಿಲ್ಯುಕ್ ರವರು ಹೇಳಿದರು.